ಕಳಸ:ಇಲ್ಲಿನ ರೋಟರಿ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಕಳಸೇಶ್ವರ ದೇವಸ್ಥಾನದ ಬಳಿಯ ಈಶ್ವರ ಕಲಾಮಂದಿರಕ್ಕೆ ಮೇಲ್ಛಾವಣಿಯನ್ನು ನಿರ್ಮಿಸಿ ಸೋಮವಾರ ದೇವಸ್ಥಾನಕ್ಕೆ ಸಮರ್ಪಿಸಲಾಯಿತು.
20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಮೇಲ್ಛಾವಣಿಯನ್ನು ಹೊರನಾಡಿನ ಜಿ.ಭೀಮೇಶ್ವರ ಜೋಷಿ ಉದ್ಘಾಟಿಸಿ ಮಾತನಾಡಿದರು.ರೋಟರಿ ಸಂಸ್ಥೆಯ ಎಲ್ಲ ಸದಸ್ಯರು ಕಳೆದ 25 ವರ್ಷಗಳಿಂದ ತಮ್ಮನ್ನು ಸಮಾಜಕ್ಕೆ ಸಮರ್ಪಿಸಿಕೊಂಡಿದ್ದಾರೆ ಎಂದರು.
25 ವರ್ಷದ ಹಿಂದೆಯೇ ಕೆರೆಮೆನೆ ನಾರಾಯಣ ರಾವ್ ಈಶ್ವರ ಕಲಾ ಮಂದಿರ ನಿರ್ಮಾಣ ಮಾಡಿದ್ದರೂ ಮೇಲ್ಛಾವಣಿ ನಿರ್ಮಾಣ ಮಾಡುವ ಸುಯೋಗ ರೋಟರಿ ಸಂಸ್ಥೆಗೆ ಒದಗಿ ಬಂತು ಎಂದರು.
ಕಳಸೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ನಂತರ ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿದೆ.ದೇವಸ್ಥಾನದ ಆಸುಪಾಸಿನ ಪರಿಸರದ ಅಭಿವೃದ್ಧಿಯಲ್ಲಿ ಭಕ್ತರ ಹಾಗೂ ದಾನಿಗಳ ಪಾತ್ರ ದೊಡ್ಡದು ಎಂದರು.
ಪ್ರಾಸ್ತಾವಿಕ ಮಾತನಾಡಿದ ರೋಟರಿ ಸ್ಥಾಪಕ ಅಧ್ಯಕ್ಷ ರಾಜಗೋಪಾಲ ಜೋಷಿ, 25 ವರ್ಷದ ಹಿಂದೆ ಶ್ರೀನಿವಾಸ ಹೆಬ್ಬಾರ್, ಎನ್.ಎಂ.ಹರ್ಷ, ಕೆ.ಕೆ.ಬಾಲಕೃಷ್ಣ ಭಟ್, ಕೆ.ಆರ್. ಭಾಸ್ಕರ್ ಪ್ರೇರಣೆಯಿಂದಾಗಿ ಕಳಸದಲ್ಲಿ ರೋಟರಿ ಸಂಸ್ಥೆ ಕಾರ್ಯಾರಂಭಿಸಿತು. ಅಂದಿನಿಂದ ಸಂಸ್ಥೆ ಪ್ರತಿವರ್ಷವೂ ಸಮಾಜಕ್ಕೆ ಗುರುತರವಾದ ಕಾಣಿಕೆ ನೀಡುತ್ತಲೇ ಬಂದಿದೆ ಎಂದು 25 ವರ್ಷದ ಸಾಧನೆ ವಿವರಿಸಿದರು.

ರೋಟರಿ ಅಧ್ಯಕ್ಷ ಕೆ.ಆರ್.ಪ್ರಭಾಕರ್ ಮಾತನಾಡಿ, ಈ ಮೇಲ್ಛಾವಣಿ ನಿರ್ಮಾಣಕ್ಕೆ ಶಾಸಕಿ ನಯನಾ ಮೋಟಮ್ಮ 10 ಲಕ್ಚ ಅನುದಾನ ಕೊಟ್ಟಿದ್ದಾರೆ. ರೋಟರಿ ಸಂಸ್ಥೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಶಾಶ್ವತ ಕೆಲಸ ಮಾಡಿದ ತೃಪ್ತಿ ಇದೆ ಎಂದರು.
ಕಳಸ ತಹಶೀಲ್ದಾರ್ ಕಾವ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ವೆಂಟಕಸುಬ್ಬಯ್ಯ,ರೋಟರಿ ಕಾರ್ಯದರ್ಶಿ ಕುಮಾರಸ್ವಾಮಿ ಭಾಗವಹಿಸಿದ್ದರು.

ಕಾರಕ್ಕಿಯ ನಾಟಿ ವೈದ್ಯ ಗೋವಿಂದೇ ಗೌಡ, ಪ್ರತಿಭಾನ್ವಿತ ವಿದ್ಯಾರ್ಥಿ ಪೂಜಿತ, ದಾನಿ ಅಭಿನಂದನ್ ಬಲ್ಲಾಳ್ ಅವರನ್ನು ರೋಟರಿ ಸಂಸ್ಥೆ ಇದೇ ಸಂದರ್ಭದಲ್ಲಿ ಸನ್ಮಾನಿಸಿತು.
ರೋಟರಿ ಅಧ್ಯಕ್ಷ ಪ್ರಭಾಕರ್ ಅವರನ್ನು ಕಳಸೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸನ್ಮಾನಿಸಿತು.ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯರಾದ ಕೆ.ಕೆ.ಬಾಲಕೃಷ್ಣ ಭಟ್, ರಂಗನಾಥ್, ಕಾರ್ತಿಕ ಶಾಸ್ತ್ರಿ, ಗೀತಾ, ಸತೀಶ್ ಕಲ್ಲಾನೆ ಇದ್ದರು.
