ಕಳಸ:ತಾಲ್ಲೂಕಿನಲ್ಲಿ ಮಾದಕ ವಸ್ತುಗಳ ಹಾವಳಿ ಮತ್ತು ಬಾಡಿಗೆ ಬಂಟರಿಂದಾಗಿ ಶಾಂತಿ ಭಂಗ ಆಗುತ್ತಿದೆ ಎಂದು ಸರ್ವಪಕ್ಷಗಳು ಆತಂಕ ಹೊರಹಾಕಿವೆ.
ಕೆಸಿಎ ಬ್ಯಾಂಕಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಕಳಸ ಸಮೀಪದ ಖಾಸಗಿ ಕಾಫೀ ತೋಟವೊಂದರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ಸುಮಾರು 50 ಭದ್ರತಾ ಸಿಬ್ಬಂದಿ ಇದ್ದು ಆಸುಪಾಸಿನ ತೋಟಗಳ ಕೃಷಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ.ಇವರ ದಾಂದಲೆಯಿಂದಾಗಿ ಜನರು ಗೌರವಯುತವಾಗಿ ಬಾಳುವುದು ಕಷ್ಟವಾಗಿದೆ. ಇವರ ಕ್ರಿಮಿನಲ್ ಹಿನ್ನೆಲೆ ತಿಳಿದುಕೊಂಡು ಪೊಲೀಸ್ ಇಲಾಖೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಶೇಷಗಿರಿ ಮಾತನಾಡಿ, ಕಳಸದಲ್ಲಿ ಮಾದಕ ವಸ್ತುಗಳ ಹಾವಳಿಯಿಂದಾಗಿ ಯುವಜನತೆ, ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ.ಮಂಗಳೂರಿನಲ್ಲಿ ನಡೆದ ಎರಡು ಕೊಲೆಗಳಲ್ಲಿ ಕಳಸದ ಆರೋಪಿಗಳು ಮತ್ತು ಕಳಸದ ಹಿನ್ನೆಲೆ ಬಗ್ಗೆ ಚರ್ಚೆ ನಡೆಯುತ್ತಿದೆ.ಶಾಂತಿಯುತ ಜೀವನಕ್ಕೆ ಹೆಸರಾಗಿದ್ದ ಕಳಸಕ್ಕೆ ಇಂತಹ ಸಂಪರ್ಕ ಎಲ್ಲಿಂದ ಬಂತು ಎಂಬ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ರಾಜೇಂದ್ರ ಹಿತ್ತಲಮಕ್ಕಿ ಮಾತನಾಡಿ, ಕಳಸದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಿ ತಪ್ಪಿತಸ್ಥರನ್ನು ಗಡೀಪಾರು ಮಾಡಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಮಾತನಾಡಿ, ರಾಜ್ಯದ ವಿವಿಧ ಕ್ರಿಮಿನಲ್ ಚಟುವಟಿಕೆಯಲ್ಲಿ ಕಳಸದ ಹೆಸರು ತಳುಕುಹಾಕಿಕೊಳ್ಳುತ್ತಿದೆ. ಸ್ಥಳೀಯರ ಬೆಂಬಲ ಇಲ್ಲದೆ ಇಂತಹ ಚಟುವಟಿಕೆ ನಡೆಯುವುದಿಲ್ಲ ಎಂದು ನಾವು ಮರೆಯಬಾರದು ಎಂದರು.
ಮಾದಕ ವಸ್ತುಗಳ ಮಾರಾಟ ಗ್ರಾಮೀಣ ಪ್ರದೇಶದಲ್ಲೂ ಎಗ್ಗಿಲ್ಲದೆ ಸಾಗಿದ್ದು ನಮ್ಮ ಮಕ್ಕಲು ಹಾದಿತಪ್ಪುವ ಅಪಾಯ ಇದೆ ಎಂದು ಪಂಚಾಯಿತಿ ಸದಸ್ಯ ರಂಗನಾಥ್ ಆತಂಕ ಹೊರಹಾಕಿದರು. ಜೆಡಿಎಸ್ ಅಧ್ಯಕ್ಷ ಸಂತೋಷ್ ಮಾತನಾಡಿ, ಹೊರಗಿನಿಂದ ಬಂದು ಇಲ್ಲಿ ತೋಟ ಖರೀದಿ ಮಾಡಿದ ನಂತರ ಅಕ್ಕಪಕ್ಕದವರು ಕೂಡ ತೋಟ ಅವರಿಗೇ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇಂತಹ ಬೇನಾಮಿ ಆಸ್ತಿ ಖರೀದಿದಾರರ ಬಗೆ ಎಚ್ಚರ ವಹಿಸಬೇಕು ಎಂದರು.
ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ, ಕಳಸ ಸಮೀಪದ ತೋಟ ವಶಪಡಿಸಿಕೊಂಡ ಖಾಸಗಿ ವ್ಯಕ್ತಿಗಳು ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಹೊರಗೆ ಅಟ್ಟಿದ ಬಗ್ಗೆ ಕಾರ್ಮಿಕ ಇಲಾಖೆ ಕ್ರಮ ವಹಿಸೇಕು ಎಂದು ಒತ್ತಾಯಿಸಿದರು.
ಕಳಸದಲ್ಲಿ ಶಾಂತಿ ಸಭೆ ನಡೆಸಿ ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆ ಮತ್ತು ಅಪರಿಚಿತ ವ್ಯಕ್ತಿಗಳ ಅಕ್ರಮ ವಾಸದ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿ ಸೂಕ್ತ ಕ್ರಮ ವಹಿಸೇಕು ಎಂದು ಅವರನ್ನು ಚಿಕ್ಕಮಗಳೂರಿಗೆ ಭೇಟಿ ನೀಡಿ ಒತ್ತಾಯಿಸಲು ಸಭೆ ತೀರ್ಮಾನಿಸಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭಾಸ್ಕರ್, ಸದಸ್ಯ ವೀರೇಂದ್ರ, ವಿವಿಧ ಸಂಘಟನೆಗಳ ಮುಖಂಡರಾದ ರವಿ ರೈ, ಅನಿಲ್ ಡಿಸೋಜ, ಬ್ರಹ್ಮದೇವ, ಪದ್ಮಕುಮಾರ್, ನಾಗೇಶ್, ಆಶಾಲತಾ ಭಾಗವಹಿಸಿದ್ದರು.
